ಆಹಾರ ಸಾಮಗ್ರಿ ವಿತರಣೆಗೆ ಬಯೋಮೆಟ್ರಿಕ್ ಟಚ್
ಬೆಂಗಳೂರು, ಆ. 27 : ಬಿಪಿಎಲ್ ಪಡಿತರ ಚೀಟಿದಾರರನ್ನು ಬಯೋಮೆಟ್ರಿಕ್ ಕಂಪ್ಯೂಟರ್ ಸಿಸ್ಟಮ್ಗೆ ಒಳಪಡಿಸುವ ಮೂಲಕ ಆಹಾರ ಪೂರೈಕೆಯಲ್ಲಿ ಪಾರದರ್ಶಕತೆಯನ್ನು ತರಲಾಗುವುದೆಂದು ಸಾರಿಗೆ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಆರ್ ಅಶೋಕ್ ತಿಳಿಸಿದರು. ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಅಕ್ಕಿ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
10 ದಿನದೊಳಗಾಗಿ ಬಯೋಮೆಟ್ರಿಕ್ ಕಂಪ್ಯೂಟರ್ ಸಿಸ್ಟಮ್ಗಾಗಿ ಟೆಂಡರ್ ಕರೆಯಲಾಗುವುದು.ಈ ಸಿಸ್ಟಮ್ಗೆ ಬಿಪಿಎಲ್ ಫಲಾನುಭವಿಗಳ ಹೆಬ್ಬೆಟ್ಟು ಗುರುತನ್ನು ಪಡೆಯಲಾಗುವುದು. ಫಲಾನುಭವಿ ಹೆಬ್ಬೆಟ್ಟು ಒತ್ತಿದೊಡನೆ ಅವರ ಖಾತೆಯಲ್ಲಿ ಲಭ್ಯವಿರುವ ಸಾಮಗ್ರಿಗಳ ವಿವರ ಹಾಗೂ ಆ ತಿಂಗಳಿನಲ್ಲಿ ಅವರು ಪಡೆದಿರುವ ಸಾಮಗ್ರಿಗಳ ಎಲ್ಲಾ ವಿವರಗಳನ್ನು ಕಂಪ್ಯೂಟರ್ ತೋರಿಸುತ್ತದೆ. ಇದರಿಂದ ಅಂಗಡಿ ಮಾಲೀಕರು ಗ್ರಾಹಕರಿಗೆ ಮೋಸ ಮಾಡುವ ಸಾಧ್ಯತೆ ಇರುವುದಿಲ್ಲ ಎಂದರು. ಸರ್ಕಾರ ಈ ಯೋಜನೆಗಾಗಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚುಮಾಡುತ್ತಿದ್ದು, ಬಯೋಮೆಟ್ರಿಕ್ ವ್ಯವಸ್ಥೆಯಿಂದ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಯೋಜನೆಗೆ ಒಳಪಡುವುದರಿಂದ ಸರ್ಕಾರಕ್ಕೆ ಹಣ ಉಳಿತಾಯವಾಗುತ್ತದೆ ಎಂದು ಹೇಳಿದರು. ಬೆಲೆ ಏರಿಕೆಯನ್ನು ನಿಯಂತ್ರಿಸುವ ಮೂಲಕ ಬಡವ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸಬೇಕೆಂಬ ದೃಷ್ಠಿಯಲ್ಲಿ ಸರ್ಕಾರವು ಪ್ರತಿ ಆರು ತಿಂಗಳಿಗೊಮ್ಮೆ ಅಕ್ಕಿ ಮೇಳವನ್ನು ಆಯೋಜಿಸುತ್ತಿದೆ.
ಈ ಮೇಳವು ಭಾನುವಾರ ನಡೆಯಲಿದ್ದು, ಆರು ತಿಂಗಳವರೆಗೆ ಮುಂದುವರಿಸಲಾಗುವುದು. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದ ಶಾಸಕರುಗಳು ಅಕ್ಕಿ ಮೇಳವನ್ನು ಆಯೋಜಿಸಲಿದ್ದಾರೆ ಎಂದು ತಿಳಿಸಿದರು. ಬಿಪಿಎಲ್, ಎಪಿಎಲ್, ಪಡಿತರ ಚೀಟಿದಾರರಲ್ಲದೆ ಪಡಿತರ ಚೀಟಿ ಹೊಂದಿಲ್ಲದವರು ತಮ್ಮ ವೃತ್ತಿ ಸಂಬಂಧ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿಯ ದೃಢೀಕೃತ ಪ್ರತಿಯನ್ನು ನೀಡಿ ಕೆ.ಜಿ.ಗೆ ರೂ.13 ರಂತೆ 50 ಕೆಜಿ. ಅಕ್ಕಿ, ಕೆಜಿ.ಗೆ ರೂ.9.50 ರಂತೆ 50 ಕೆಜಿ ಗೋಧಿಯನ್ನು ಎಲ್ಲರೂ ಪಡೆಯಬಹುದಾಗಿದೆ ಎಂದರು. ಬಿಪಿಎಲ್ ಪಡಿತರ ಚೀಟಿದಾರರಿಗೆ ಕಡಿಮೆ ದರದಲ್ಲಿ ಆಹಾರ ಸಾಮಗ್ರಿ ಒದಗಿಸುವ ಮಾದರಿಯಲ್ಲಿಯೇ ಪ್ರಥಮ ಬಾರಿಗೆ ಎಪಿಎಲ್ ಪಡಿತರ ಚೀಟಿದಾರರಿಗೂ ಪ್ರತಿ ತಿಂಗಳಿಗೆ ಕೆಜಿ.ಗೆ ರೂ.9.40 ರಂತೆ 5 ಕೆಜಿ. ಅಕ್ಕಿ ಹಾಗೂ ಕೆಜಿ.ಗೆ ರೂ.7.20 ರಂತೆ 2 ಕೆಜಿ. ಗೋಧಿಯನ್ನು ಹಂಚಿಕೆ ಮಾಡಲು ಆದೇಶ ನೀಡಲಾಗಿದೆ ಎಂದು ಅಶೋಕ್ ವಿವರಿಸಿದರು.